ಬೆಂಗಳೂರು, ನ.8:
ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳದೇ, ಕೇವಲ ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಅವರು ಮಾತನಾಡಿ, “ಈ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರಿಗೆ ಅಥವಾ ರಾಜ್ಯದ ರಸ್ತೆಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಆದರೆ ಈಗ ಏಕಾಏಕಿ ‘ಗುಂಡಿ ಮುಚ್ಚುವಿಕೆ’ ಹೆಸರಿನಲ್ಲಿ 1800 ಕೋಟಿ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. 1800 ಕೋಟಿ ಖರ್ಚಾಗಿದ್ದರೆ ಗುಂಡಿಗಳು ಎಲ್ಲಿ ಮುಚ್ಚಲಾಗಿದೆ? ಮುಚ್ಚಿದವೆಲ್ಲಾ ಮತ್ತೆ ತೆರೆದುಕೊಂಡಿವೆ!” ಎಂದು ಕಿಡಿಕಾರಿದರು.
ಅಶೋಕ್ ಮುಂದುವರಿಸಿ, “ಜನರ ತೆರಿಗೆ ಹಣವನ್ನು ಕಂಟ್ರಾಕ್ಟರ್ಗಳು ಕಳಪೆ ಕಾಮಗಾರಿಗಳ ಮೂಲಕ ದುರುಪಯೋಗ ಮಾಡುತ್ತಿದ್ದಾರೆ. ಈ ಗುಂಡಿಗಳ ಸರ್ಕಾರ ಕರ್ನಾಟಕದ, ವಿಶೇಷವಾಗಿ ಬೆಂಗಳೂರಿನ ಜನತೆಗೆ ಶಾಪವಾಗಿದೆ,” ಎಂದು ತೀವ್ರ ಟೀಕೆ ಮಾಡಿದ್ದಾರೆ.
ಅವರು ಇನ್ನೂ ಹೇಳಿದರು — “ಕಾಂಗ್ರೆಸ್ ಸರ್ಕಾರದ ಕಾರ್ಯಪಟುತೆಯ ವಿರುದ್ಧ ನಾವು ಶೀಘ್ರದಲ್ಲೇ ಶ್ವೇತಪತ್ರ ಬಿಡುಗಡೆ ಮಾಡಲಿದ್ದೇವೆ. ಬೆಂಗಳೂರಿಗೆ ಬಿಜೆಪಿ ಸರ್ಕಾರದ ಕೊಡುಗೆ ಏನು, ಕಾಂಗ್ರೆಸ್ ಕೊಡುಗೆ ಏನು ಎಂಬುದನ್ನು ಜನತೆಗೆ ತೋರಿಸುತ್ತೇವೆ,” ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ವಾರ ಗಡುವು ಕೇಳಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಬೆಂಗಳೂರಿನಲ್ಲಿ ಪ್ರತಿಭಟನೆಗಳ ಎರಡನೇ ಹಂತವನ್ನು ಪ್ರಾರಂಭಿಸಿದ್ದೇವೆ ಎಂದು ಅಶೋಕ್ ತಿಳಿಸಿದರು.


